ಜನರಿಗಾಗಿ ಸಿನಿಮಾ ಆಗಲೇ ಅದಕ್ಕೊಂದು ನೆಲೆ. ಜನರ ಪ್ರತಿಕ್ರಿಯೆ ಸಿನಿಮಾ ಮಂದಿಗಂತೂ ಬಹಳ ಮುಖ್ಯ. ಈ ನಿಟ್ಟಿನಲ್ಲಿ ’ನೀ ಇಲ್ಲದೆ’ ಕನ್ನಡ ಸಿನಿಮಾ ಜನರ ಮುಂದೆ ಧ್ವನಿಸುರುಳಿ ಬಿಡುಗಡೆಯನ್ನು ಆಚರಿಸಿಕೊಂಡಿದೆ. ಕೇವಲ ಬಿಡುಗಡೆಯಷ್ಟೆ ಅಲ್ಲದೆ ಕಳೆದ ವರ್ಷ ಎಸ್.ಎಸ್.ಎಲ್.ಸಿ. ತರಗತಿಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಶ್ರೀ ವೀಣಾ ಎಜುಕೇಷನ್ ಸೊಸೈಟಿಯ ೮೦ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಧ್ವನಿಸುರುಳಿ ಬಿಡುಗಡೆಯಂದು ಇಟ್ಟುಕೊಂಡಿದ್ದರು. ವಿದ್ಯಾರ್ಥಿಗಳ ಪೋಷಕರು ಈ ಸಂಧರ್ಭದಲ್ಲಿ ಹಾಜರಿದ್ದು ಶುಭ ಕೋರಿದರು. ವಿದ್ಯಾರ್ಥಿಗಳಿಗೆ ಉಚಿತವಾಗಿ ಧ್ವನಿಸುರುಳಿ ನೀಡಲಾಯಿತು.
ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಪುಟ್ಟ ಹುಡುಗರಿಂದ ಚಿತ್ರದ ಶೀರ್ಷಿಕೆ ಗೀತೆಗೆ ನೃತ್ಯ ಮಾಡಿಸಲಾಯಿತು. ಅಂದಿನ ಸಭೆಯಲ್ಲಿ ರಾಜರಾಜೇಶ್ವರಿ ನಗರ ಎಂ.ಎಲ್.ಎ. ಶ್ರೀನಿವಾಸ್, ಬಿ.ಬಿ.ಎಂ.ಪಿ ಸದಸ್ಯ ತಿಮ್ಮರಾಜು, ಲಕ್ಷ್ಮಿದೇವಿ ನಗರದ ಆನಂದಪ್ಪ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ತಿಮ್ಮನಂಜಯ್ಯ, ಶ್ರೀ ವೀಣಾ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಗಿರಿಜೇಶ್ವರಿ ದೇವಿ, ನಿರ್ಮಾಪಕಿ ನಾಗಮಲ್ಲೇಶ್ವರಿ, ಲಹರಿ ಸಂಸ್ಥೆಯ ವೇಲು, ಕರಿಸುಬ್ಬು, ಕೆ.ವಿ. ನಾಗೇಶ್ ಕುಮಾರ್, ಸೈಕೋ ಚಿತ್ರದ ನಿರ್ದೇಶಕ ದೇವದತ್ತ, ನಾಯಕ ನಟ ರಘು ಮುಖರ್ಜಿ ಸಮಾರಂಭದಲ್ಲಿ ಹಾಜರಿದ್ದರು.
ಏಕರುದ್ರಾದೇವಿ ಫಿಲಂಸ್ ಲಾಂಛನದಲ್ಲಿ ಚೆನ್ನುಪಾಟಿ ನಾಗಮಲ್ಲೇಶ್ವರಿ ನಿರ್ಮಿಸುತ್ತಿರುವ ’ಅನು’ ಚಿತ್ರದ ನಂತರ ಶಿವಗಣಪತಿ ನಿರ್ದೇಶಿಸುತ್ತಿರುವ ’ನೀ ಇಲ್ಲದೆ’ ಸೆನ್ಸಾರ್ ಮಂಡಳಿಯಿಂದ ಅರ್ಹತಾ ಪತ್ರವನ್ನು ಈಗಾಗಲೇ ಪಡೆದಿದೆ.
ಸಾಮಾನ್ಯವಾಗಿ ಪ್ರೇಮಿಗಳು ’ನೀ ಇಲ್ಲದೆ’ ಎಂದು ಹೇಳುವುದು ಕೇಳಿದ್ದೇವೆ. ಇದೇ ಶೀರ್ಷಿಕೆಯ ಚಿತ್ರದಲ್ಲಿ ಯಾರು ಯಾರಿಗೆ ’ನೀ ಇಲ್ಲದೆ’ ಎಂದು ಹೇಳುವರು ಅದು ಕುತೂಹಲಕಾರಿ ವಿಚಾರ. ’ನೀ ಇಲ್ಲದೆ’ ಚಿತ್ರಕ್ಕೆ ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು ಬಾಲಾಜಿ ಧ್ವನಿ ಗ್ರಹಣ ಕೇಂದ್ರದಲ್ಲಿ ಡಬ್ಬಿಂಗ್ ಹಾಗೂ ರಿರೆಕಾರ್ಡಿಂಗ್ ನಡೆಸಲಾಗಿದೆ. ಹಳ್ಳಿ ಹುಡುಗಿಯಾದ ಪೂಜಾಗಾಂಧಿ ಸಂಗೀತ ಕಲಿತು ಏನಾದರೂ ಸಾಧನೆ ಮಾಡಲೆಂದು ಪಟ್ಟಣಕ್ಕೆ ಬಂದಾಗ ಸಂಗೀತದ ಟೀಚರ್ ರಘು ಮುಖರ್ಜಿ ಆಕೆಯ ಜೀವನದಲ್ಲಿ ಯಾವರೀತಿ ಬದಲಾವಣೆಗೆ ಕಾರಣವಾಗುತ್ತಾನೆ ಎಂಬುದು ಚಿತ್ರದ ಕಥಾ ಹಂದರ. ಅನಿರೀಕ್ಷಿತ ಘಟನೆಗಳ ಜೊತೆಗೆ ಚಿತ್ರದಲ್ಲಿ ಸಸ್ಪೆನ್ಸ್ ಕೂಡಾ ಇದೆ.